ರಾಜ್ಯ ಸುದ್ದಿಗಳು :
'MIST' – ಬೆಂಗಳೂರಿನ ಹೊಸ ತಂತ್ರಜ್ಞಾನ ಮತ್ತು ನವೋದ್ಯಮ ಮ್ಯೂಸಿಯಂ
ಭಾರತದ ತಂತ್ರಜ್ಞಾನ ಹಾಗೂ ಸ್ಟಾರ್ಟ್ಅಪ್ಗಳ ರಾಜಧಾನಿಯಾದ ಬೆಂಗಳೂರಿನ ನಾವೀನ್ಯತೆಯ ಸುದೀರ್ಘ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಲು, ವಿಶ್ವಪ್ರಸಿದ್ಧ ಈಜಿಪ್ಟ್ನ 'ಗ್ರ್ಯಾಂಡ್ ಈಜಿಪ್ಟಿಯನ್ ಮ್ಯೂಸಿಯಂ' ವಿನ್ಯಾಸಗೊಳಿಸಿದ ಐರ್ಲೆಂಡ್ ಮೂಲದ ಹೆನೆಗಾನ್ ಪೆಂಗ್ ಆರ್ಕಿಟೆಕ್ಟ್ಸ್ ಸಂಸ್ಥೆಯ ವಾಸ್ತುಶಿಲ್ಪ ವಿನ್ಯಾಸದೊಂದಿಗೆ ಬೈಯಪ್ಪನಹಳ್ಳಿಯ ಎನ್ಜಿಇಎಫ್ (NGEF) ಆವರಣದಲ್ಲಿ ವಿಶ್ವದರ್ಜೆಯ 'ಮ್ಯೂಸಿಯಂ ಆಫ್ ಇನ್ನೋವೇಷನ್, ಸ್ಟಾರ್ಟ್ಅಪ್ & ಟೆಕ್ನಾಲಜಿ' (MIST) ಎಂಬ ನೂತನ ಸಂಗ್ರಹಾಲಯವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
------------------------------
ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿದ್ದರಿಂದ ಶಾಲಾ ಶಿಕ್ಷಣ ಇಲಾಖೆಯ 'ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ'ಯ ಹೆಸರಿನೊಂದಿಗೆ ಸಾರ್ವಜನಿಕ ವ್ಯವಹಾರಗಳು, ಆಡಳಿತಾತ್ಮಕ ಪತ್ರವ್ಯವಹಾರ, ಅಧಿಸೂಚನೆಗಳು ಹಾಗೂ ತಂತ್ರಾಂಶ ದತ್ತಾಂಶ (Data) ನಿರ್ವಹಣೆಯಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ಪರಿಹರಿಸಿ ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟತೆ ತರಲು, ಶಿಕ್ಷಣ ಇಲಾಖೆಯು ತನ್ನ 'ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ'ಯನ್ನು ಇನ್ಮುಂದೆ 'ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ' ಎಂದು ಅಧಿಕೃತವಾಗಿ ಹೆಸರು ಬದಲಾಯಿಸಿ ಆದೇಶಿಸಿದೆ.
________________________________________________________________________________
ರಾಷ್ಟ್ರೀಯ ಸುದ್ದಿಗಳು :
1947 ರ ಜುಲೈ 22 ಭಾರತದ ರಾಷ್ಟ್ರಧ್ವಜ ಅಂಗೀಕಾರ ದಿನ: ಐತಿಹಾಸಿಕ ಹಿನ್ನೆಲೆ
ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯನವರು 1921 ರಲ್ಲಿ ರೂಪಿಸಿದ ಮೂಲ ವಿನ್ಯಾಸಕ್ಕೆ ಮಹಾತ್ಮ ಗಾಂಧೀಜಿಯವರ ಸಲಹೆಯಂತೆ ಶಾಂತಿ ಹಾಗೂ ಪ್ರಗತಿಯ ಸಂಕೇತವಾಗಿ ಬಿಳಿ ಬಣ್ಣ ಮತ್ತು ಚರಕವನ್ನು ಸೇರಿಸಿ, ನಂತರ 1931 ರ ಕರಾಚಿ ಕಾಂಗ್ರೆಸ್ ಅಧಿವೇಶನದಲ್ಲಿ 'ಸ್ವರಾಜ್ ಧ್ವಜ'ವಾಗಿ ಅಂಗೀಕರಿಸಲ್ಪಟ್ಟ ತ್ರಿವರ್ಣ ಧ್ವಜವನ್ನು 1947 ರ ಜುಲೈ 22 ರಂದು ಭಾರತೀಯ ಸಂವಿಧಾನ ಸಭೆಯು ದೇಶದ ಅಧಿಕೃತ 'ರಾಷ್ಟ್ರಧ್ವಜ'ವಾಗಿ ಸ್ವೀಕರಿಸಿದ್ದರಿಂದ, ಈ ಮಹತ್ವದ ಚಾರಿತ್ರಿಕ ಘಟನೆಯ ಸವಿನೆನಪಿಗಾಗಿ ಪ್ರತಿ ವರ್ಷ ಜುಲೈ 22 ರಂದು ಭಾರತದಾದ್ಯಂತ 'ರಾಷ್ಟ್ರೀಯ ಧ್ವಜ ಸ್ವೀಕಾರ ದಿನ'ವನ್ನು ಅತ್ಯಂತ ದೇಶಭಕ್ತಿ ಹಾಗೂ ಗೌರವದಿಂದ ಆಚರಿಸಲಾಗುತ್ತದೆ.
------------------------------------
'ರಾಜಮಾರ್ಗಯಾತ್ರ' ಆಪ್ಗೆ NHAI ತಂದಿರುವ ನೂತನ ಡಿಜಿಟಲ್ ಸೇವೆಗಳು
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ತನ್ನ 'ರಾಜಮಾರ್ಗಯಾತ್ರ' ಮೊಬೈಲ್ ಆಪ್ ಮೂಲಕ ಪ್ರಯಾಣಿಕರ ಅನುಕೂಲಕ್ಕಾಗಿ ಡಿಜಿಲಾಕರ್, ವಾಹನ್ ಪೋರ್ಟಲ್ ಹಾಗೂ GIS ತಂತ್ರಜ್ಞಾನಗಳನ್ನು ಸಂಯೋಜಿಸಿ, ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳಿಗೆ ದೆಹಲಿಯ 'ಮುಂಡ್ಕಾ-ಬಕ್ಕರ್ವಾಲಾ' ಟೋಲ್ ಪ್ಲಾಜಾದಿಂದ ಪ್ರಥಮವಾಗಿ ಆರಂಭಿಸಿರುವ 'ಡಿಜಿಟಲ್ ಲೋಕಲ್ ಟೋಲ್ ಪಾಸ್' ಸೌಲಭ್ಯ ಹಾಗೂ ಕನ್ನಡ ಸೇರಿದಂತೆ ಒಟ್ಟು 22 ಪ್ರಮುಖ ಭಾರತೀಯ ಭಾಷೆಗಳಲ್ಲಿ ಸಾರ್ವಜನಿಕರಿಗೆ ಮಾರ್ಗದರ್ಶನ ಮತ್ತು ತಕ್ಷಣದ ನೆರವು ಒದಗಿಸುವ 'ಮಾರ್ಗಮಿತ್ರ' ಡಿಜಿಟಲ್ ಸಹಾಯ ಕೇಂದ್ರ ಎಂಬ ಎರಡು ಪ್ರಮುಖ ಕ್ರಾಂತಿಕಾರಿ ಸೇವೆಗಳನ್ನು ಯಶಸ್ವಿಯಾಗಿ ಬಿಡುಗಡೆಗೊಳಿಸಿದೆ.
-------------------------------------
ಭಾರತದ ಪ್ರಥಮ ತಂತ್ರಜ್ಞಾನ ಆಧಾರಿತ ಭಾಷಾ ಸಂಗ್ರಹಾಲಯ: ‘ಶಬ್ದಲೋಕ’
ಕೇಂದ್ರ ಸಂಸ್ಕೃತಿ ಸಚಿವಾಲಯದ ಮಾರ್ಗದರ್ಶನದಲ್ಲಿ ಕೋಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯದ ಬೆಲ್ವೆಡೆರೆ ಹೌಸ್ನಲ್ಲಿ ಜುಲೈ 19, 2026 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉದ್ಘಾಟನೆಗೊಂಡ ಭಾರತದ ಮೊದಲ ಇಮರ್ಸಿವ್ ಭಾಷಾ ಸಂಗ್ರಹಾಲಯವಾದ 'ಶಬ್ದಲೋಕ', ಕೃತಕ ಬುದ್ಧಿಮತ್ತೆ (AI) ಮತ್ತು ವರ್ಧಿತ ರಿಯಾಲಿಟಿ (AR) ನಂತಹ ಆಧುನಿಕ ಡಿಜಿಟಲ್ ತಂತ್ರಜ್ಞಾನ, 380ಕ್ಕೂ ಹೆಚ್ಚು ಭಾಷೆಗಳ ಪ್ರದರ್ಶನಗಳು ಹಾಗೂ 9 ವೈವಿಧ್ಯಮಯ ಗ್ಯಾಲರಿಗಳ ಮೂಲಕ 121 ಪ್ರಮುಖ ಭಾಷೆಗಳು ಸೇರಿದಂತೆ ಭಾರತದ ಶ್ರೀಮಂತ ಭಾಷಾ ಪರಂಪರೆ, ಇತಿಹಾಸ ಮತ್ತು ಸಾಂಸ್ಕೃತಿಕ ವಿಕಸನವನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.
----------------------------------
ಎನ್.ಎಸ್.ಇ ಸಂಸ್ಥೆಯಿಂದ 'ಎಲೆಕ್ಟ್ರಾನಿಕ್ ಗೋಲ್ಡ್ ರಿಸೀಪ್ಟ್ (EGR)' ವಿಭಾಗದ ನೂತನ ಚಾಲನೆ
ಸೆಬಿ (SEBI) ಮಾನ್ಯತೆ ಪಡೆದ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರವು (NSE) ಭಾರತದ ಭೌತಿಕ ಚಿನ್ನದ ಮಾರುಕಟ್ಟೆಯನ್ನು ಹೆಚ್ಚು ಪಾರದರ್ಶಕ ಹಾಗೂ ಸುಸಂಘಟಿತ ಚೌಕಟ್ಟಿಗೆ ತರುವ ಉದ್ದೇಶದಿಂದ 'ಎಲೆಕ್ಟ್ರಾನಿಕ್ ಗೋಲ್ಡ್ ರಿಸೀಪ್ಟ್' (EGR) ಎಂಬ ನೂತನ ಡಿಜಿಟಲ್ ಪ್ರತಿಪತ್ರ ವಹಿವಾಟನ್ನು ಅಧಿಕೃತವಾಗಿ ಆರಂಭಿಸಿದ್ದು, ಇದರ ಮೂಲಕ ಹೂಡಿಕೆದಾರರು ಸುರಕ್ಷಿತ ವಾಲ್ಟ್ಗಳಲ್ಲಿ ಭದ್ರವಾಗಿಟ್ಟಿರುವ ನೈಜ ಚಿನ್ನದ ಹಿನ್ನೆಲೆ ಹೊಂದಿರುವ ಶೇರುಗಳಂತೆಯೇ ತಮ್ಮ ಡಿಮ್ಯಾಟ್ ಖಾತೆಯಲ್ಲಿ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸಲು, ವಹಿವಾಟು ನಡೆಸಲು ಮತ್ತು ಅಗತ್ಯವಿದ್ದಾಗ ಅದನ್ನು ನೇರವಾಗಿ ಭೌತಿಕ ಚಿನ್ನವಾಗಿ ಮರಳಿ ಪಡೆಯಲು ಅತ್ಯುತ್ತಮ ಅವಕಾಶ ಲಭ್ಯವಾಗಿದೆ.
-----------------------------------
ಲಾರ್ಡ್ಸ್ ಮೈದಾನದಲ್ಲಿ ರೋಹಿತ್ ಶರ್ಮಾ ಐತಿಹಾಸಿಕ ಶತಕ ಹಾಗೂ ನೂತನ ವಿಶ್ವ ದಾಖಲೆಗಳ ಪರ್ವ
ಭಾರತೀಯ ಕ್ರಿಕೆಟ್ ತಂಡದ ಜವಾಬ್ದಾರಿಯುತ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಲಂಡನ್ನ ಪ್ರಸಿದ್ಧ ಲಾರ್ಡ್ಸ್ ಮೈದಾನದಲ್ಲಿ ತಮ್ಮ 34ನೇ ಏಕದಿನ ಶತಕ ಬಾರಿಸುವ ಮೂಲಕ ಲಾರ್ಡ್ಸ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಪುರುಷ ಕ್ರಿಕೆಟಿಗ, 39ನೇ ವಯಸ್ಸಿನಲ್ಲಿ (39 ವರ್ಷ 80 ದಿನ) ಶತಕ ಸಾಧಿಸಿದ ಅತ್ಯಂತ ಹಿರಿಯ ಭಾರತೀಯ, ವಿದೇಶಿ ನೆಲವೊಂದರಲ್ಲಿ ಅತಿ ಹೆಚ್ಚು (ಇಂಗ್ಲೆಂಡ್ನಲ್ಲಿ 8) ಏಕದಿನ ಶತಕ ಗಳಿಸಿದ ಬ್ಯಾಟರ್ ಹಾಗೂ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕ (46) ಗಳಿಸಿದ ಆಟಗಾರ ಎಂಬ ಸಾಲು ಸಾಲು ವಿಶ್ವ ದಾಖಲೆಗಳನ್ನು ಬರೆದು ಸಚಿನ್ ತೆಂಡೂಲ್ಕರ್ ಅವರ ಪ್ರಮುಖ ದಾಖಲೆಗಳನ್ನು ಮುರಿದಿದ್ದಾರೆ.
--------------------------------------
ದೆಹಲಿಯಲ್ಲಿ NEET ಅಕ್ರಮ ವಿರೋಧಿಸಿ ಭುಗಿಲೆದ್ದ 'ಸಂಸತ್ ಚಲೋ' ಪ್ರತಿಭಟನೆ
ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾದ ಹಿನ್ನೆಲೆಯಲ್ಲಿ, ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜಿಪಿ (CJP) ಸಂಸ್ಥಾಪಕ, ಶಿಕ್ಷಣ ಸುಧಾರಕ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಲ ಮತ್ತು ಸಾವಿರಾರು ಯುವಕರು ಜಂತರ್ ಮಂತರ್ನಿಂದ ಸಂಸತ್ ಭವನದತ್ತ ನಡೆಸಿದ 'ಸಂಸತ್ ಚಲೋ' ಬೃಹತ್ ಮೆರವಣಿಗೆಯು ಉದ್ವಿಗ್ನ ವಾತಾವರಣ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಯಿತಲ್ಲದೆ, ಪರಿಸ್ಥಿತಿ ತಿಳಿಗೊಳಿಸಲು ಕೇಂದ್ರ ಸಚಿವ ಜಿ.ಪಿ. ನಡ್ಡಾ ಅವರು ಪ್ರತಿಭಟನಾಕಾರರೊಂದಿಗೆ ತುರ್ತು ಮಾತುಕತೆ ನಡೆಸಿದರು.
________________________________________________________________________________
ಅಂತಾರಾಷ್ಟ್ರೀಯ ಸುದ್ದಿಗಳು :
ಸ್ಪೇನ್ ತಂಡಕ್ಕೆ ಎರಡನೇ ಬಾರಿ ಫಿಫಾ ವಿಶ್ವಕಪ್ ಮುಕುಟ
ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಹಾಲಿ ಚಾಂಪಿಯನ್ ಅರ್ಜೆಂಟಿನಾವನ್ನು 1-0 ಗೋಲುಗಳಿಂದ ಮಣಿಸಿ, 2010ರ ನಂತರ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಚಾರಿತ್ರಿಕ ಪಂದ್ಯದಲ್ಲಿ ಬದಲೀ ಆಟಗಾರನಾಗಿ ಬಂದ ಫೆರಾನ್ ಟೋರೆಸ್ 106ನೇ ನಿಮಿಷದಲ್ಲಿ (ಎಕ್ಸ್ಟ್ರಾ ಟೈಮ್) ನಿರ್ಣಾಯಕ ಗೋಲು ಬಾರಿಸಿ ಸ್ಪೇನ್ಗೆ ಭರ್ಜರಿ ಜಯ ತಂದಿತ್ತರು. ಟೂರ್ನಿಯುದ್ದಕ್ಕೂ ಕೇವಲ 1 ಗೋಲು ಮಾತ್ರ ಬಿಟ್ಟುಕೊಟ್ಟು ಅತ್ಯುತ್ತಮ ರಕ್ಷಣಾತ್ಮಕ ಸಾಧನೆ ತೋರಿದ ಸ್ಪೇನ್ ತಂಡವನ್ನು ತಾಯ್ನಾಡಿನ ಮ್ಯಾಡ್ರಿಡ್ನಲ್ಲಿ 20 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಅದ್ದೂರಿಯಾಗಿ ಸ್ವಾಗತಿಸಿದರು.
ಟೂರ್ನಿಯ ಮುಖ್ಯ ಪ್ರಶಸ್ತಿಗಳು ಮತ್ತು ಸಾಧನೆಗಳು:
ಚಿನ್ನದ ಬೂಟು ಪ್ರಶಸ್ತಿ (Golden Boot): ಕೈಲಿಯನ್ ಎಂಬಾಪೆ (ಫ್ರಾನ್ಸ್) – 10 ಗೋಲುಗಳು.
ಇತರ ಪ್ರಮುಖ ಗೋಲ್ ಸ್ಕೋರರ್: ಲಯೋನೆಲ್ ಮೆಸ್ಸಿ (ಅರ್ಜೆಂಟೀನಾ) – 8 ಗೋಲುಗಳು.
ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಗೋಲು ಬಾರಿಸಿದ ಸಾರ್ವಕಾಲಿಕ ದಾಖಲೆ: ಕೈಲಿಯನ್ ಎಂಬಾಪೆ (22 ಗೋಲುಗಳು): ವಿಶ್ವಕಪ್ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ನೂತನ ದಾಖಲೆ ನಿರ್ಮಿಸಿದರು.
ಇವರು ಲಯೋನೆಲ್ ಮೆಸ್ಸಿ (21 ಗೋಲುಗಳು) ಅವರ ದಾಖಲೆಯನ್ನು ಮುರಿದರು.
ಸ್ಪೇನ್ ತಂಡದ ಪ್ರಮುಖ ಸಾಧನೆಗಳು:
ಫೈನಲ್ ಪಂದ್ಯದ ಫಲಿತಾಂಶ: ಸ್ಪೇನ್ 1 – 0 ಅರ್ಜೆಂಟೀನಾ.
ವಿಜೇತ ಗೋಲು: ಫೆರಾನ್ ಟೊರೆಸ್ (106ನೇ ನಿಮಿಷದಲ್ಲಿ).
ಸ್ಪೇನ್ ಒಟ್ಟು ಗಳಿಸಿದ ಗೋಲುಗಳು: 14.
ಅತ್ಯುತ್ತಮ ರಕ್ಷಣೆ: ಆಡಿದ 8 ಪಂದ್ಯಗಳಲ್ಲಿ ಸ್ಪೇನ್ ಬಿಟ್ಟುಕೊಟ್ಟಿದ್ದು ಕೇವಲ 1 ಗೋಲು ಮಾತ್ರ.
ನಾಯಕ: ರೊಡ್ರಿ.
ಅತಿ ಹೆಚ್ಚು ಪ್ರಶಸ್ತಿ ಗೆದ್ದ ದೇಶಗಳ ಪಟ್ಟಿ:
ಬ್ರೆಜಿಲ್ (5) (ಅತಿ ಹೆಚ್ಚು) 1958, 1962, 1970, 1994, 2002
ಜರ್ಮನಿ (4) 1954, 1974, 1990, 2014 |
ಇಟಲಿ (4)1934, 1938, 1982, 2006
ಅರ್ಜೆಂಟೀನಾ (3) 1978, 1986, 2022
ಫ್ರಾನ್ಸ್ (2) 1998, 2018
ಉರುಗ್ವೆ (2) 1930 (ಮೊದಲ ವಿಶ್ವಕಪ್), 1950
ಸ್ಪೇನ್ ( 2) 2010, 2026
ಇಂಗ್ಲೆಂಡ್ (1) 1966
ಪ್ರಮುಖ ಅಂಶಗಳು:
1.ಅತಿ ಹೆಚ್ಚು ಫಿಫಾ ವಿಶ್ವಕಪ್ ಗೆದ್ದ ದೇಶ: ಬ್ರೆಜಿಲ್ (5 ಬಾರಿ).
2.ಮೊದಲ ಫಿಫಾ ವಿಶ್ವಕಪ್ ವಿಜೇತ ದೇಶ: ಉರುಗ್ವೆ (1930).
3. ಸ್ಪೇನ್ ದೇಶದ ವಿಶ್ವಕಪ್ಗಳು: 2 (2010 ಮತ್ತು 2026).
------------------------------------
58ನೇ ಅಂತರರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್ (IChO 2026)
ಉಜ್ಬೇಕಿಸ್ತಾನದ ತಾಷ್ಕೆಂಟ್ ನಗರದಲ್ಲಿ ಜುಲೈ 10–19, 2026ರಂದು ನಡೆಯಿತು. ಇದರಲ್ಲಿ 93ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿದ ದೇವದತ್ತ ಪ್ರಿಯದರ್ಶಿ, ಹರ್ಷಿತ್ ಸಿಂಗ್ಲಾ, ಕಬೀರ್ ಚಿಲ್ಲಾರ್ ಮತ್ತು ಸಂದೀಪ್ ಕುಚಿ ಅವರು ನಾಲ್ವರೂ ಚಿನ್ನದ ಪದಕಗಳನ್ನು ಗೆದ್ದು, ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ ಸ್ಪರ್ಧಿಗಳು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ದೇಶವಾರು ಪದಕ ಪಟ್ಟಿಯಲ್ಲಿ ಭಾರತವು ಚೀನಾ, ವಿಯೆಟ್ನಾಂ ಹಾಗೂ Individual Participants Group B (ರಷ್ಯಾದ ವೈಯಕ್ತಿಕ ಸ್ಪರ್ಧಿಗಳ ಗುಂಪು) ಜೊತೆ ಜಂಟಿ ಪ್ರಥಮ ಸ್ಥಾನ ಪಡೆದಿತು.
----------------------------------------------
ಬ್ರಿಟನ್ ನೂತನ ಪ್ರಧಾನಿಯಾಗಿ ಆಂಡಿ ಬರ್ನ್ಹ್ಯಾಮ್
ಮಾಜಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆಯ ನಂತರ ಬ್ರಿಟನ್ನ ಆಡಳಿತಾರೂಢ ಲೇಬರ್ ಪಾರ್ಟಿಯ ಬಹುತೇಕ ಸಂಸದರ ಅಭೂತಪೂರ್ವ ಬೆಂಬಲದೊಂದಿಗೆ ನಾಯಕತ್ವದ ಸ್ಪರ್ಧೆಯಲ್ಲಿ ಏಕೈಕ ಪ್ರಬಲ ನಾಯಕರಾಗಿ ಹೊರಹೊಮ್ಮಿದ ಗ್ರೇಟರ್ ಮಾಂಚೆಸ್ಟರ್ನ ಮಾಜಿ ಮೇಯರ್ ಆಂಡಿ ಬರ್ನ್ಹ್ಯಾಮ್ ಅವರು, ಜುಲೈ 20, 2026 ರಂದು ಲಂಡನ್ನ ಪ್ರತಿಷ್ಠಿತ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್ III ಅವರಿಂದ ನೂತನ ಸರ್ಕಾರ ರಚನೆಯ ಆಹ್ವಾನ ಪಡೆದುಕೊಂಡು ಯುಕೆಯ 59ನೇ ಪ್ರಧಾನಮಂತ್ರಿಯಾಗಿ ಅಧಿಕೃತವಾಗಿ ಪದಗ್ರಹಣ ಮಾಡುವ ಮೂಲಕ, ಕಳೆದ 10 ವರ್ಷಗಳ ಅವಧಿಯಲ್ಲಿ ಬ್ರಿಟನ್ ಅಧಿಕಾರ ಪೀಠಕ್ಕೇರಿದ 7ನೇ ಪ್ರಧಾನಿ ಎಂಬ ವಿಶಿಷ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
---------------------------------------------
ಭಾರತ-ಶ್ರೀಲಂಕಾ 'DTAA' ಒಪ್ಪಂದಕ್ಕೆ ತಿದ್ದುಪಡಿ: ತೆರಿಗೆ ವಂಚನೆ ತಡೆಗೆ 'PPT' ನಿಯಮ ಜಾರಿ
ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ತೆರಿಗೆ ವಿನಾಯಿತಿ ಒಪ್ಪಂದಕ್ಕೆ (DTAA : Double Taxation Avoidance Agreement) ಹೊಸ ತಿದ್ದುಪಡಿ ತರಲಾಗಿದ್ದು, ಕೃತಕ ಕಂಪನಿಗಳ ರಚನೆ ಮತ್ತು 'ಟ್ರಿಟಿ ಶಾಪಿಂಗ್' ಮೂಲಕ ನಡೆಯುವ ಅಕ್ರಮ ತೆರಿಗೆ ವಂಚನೆಯನ್ನು ತಡೆಯಲು ಜೂನ್ 19, 2026 ರಿಂದ ಜಾರಿಗೆ ಬರುವಂತೆ 'ಪ್ರಿನ್ಸಿಪಲ್ ಪರ್ಪಸ್ ಟೆಸ್ಟ್' (PPT) ಎಂಬ ಕಠಿಣ ನಿಯಮವನ್ನು ಸೇರ್ಪಡೆಗೊಳಿಸಲಾಗಿದೆ. ಈ ಹೊಸ ನಿಯಮಗಳು ಆರ್ಥಿಕ ವರ್ಷ 2027-28 ರಿಂದ ಬರುವ ಆದಾಯಕ್ಕೆ ಅನ್ವಯವಾಗಲಿದ್ದು, ಚಾಲ್ತಿಯಲ್ಲಿರುವ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಕೇವಲ ತೆರಿಗೆ ಅಕ್ರಮಗಳನ್ನು ತಡೆಯುವುದನ್ನೇ ಪ್ರಮುಖ ಉದ್ದೇಶವಾಗಿಸಿಕೊಂಡಿವೆ.
________________________________________________________________________________

No comments:
Post a Comment